Sunday, September 28, 2008

ಮೋಕ್ಷ ಪ್ರಾಪ್ತಿಯ ಗುಟ್ಟು

Sri Brahmanand Maharaj
ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು.

ಪರಮಪ್ರಾಪ್ತಿ ಸದ್ಗತಿ ಆಗಬೇಕೆಂದು ಪೂರ್ಣ ಇಚ್ಛಾ - ಖರೆ ಇರಾದಾ ಇದ್ದವರು ಸದಾ ಸರ್ವದಾ ಅಖಂಡ ರಾಮನಾಮ ಸ್ಮರಣೆ ಮಾಡಬೇಕು. ಅಹೇತುಕ ಅವ್ಯಭಿಚಾರಿಣಿ ಶ್ರೀ ರಾಮಭಕ್ತಿ ಮಾಡಿ ಕೃತಾರ್ಥಾರಾಗಬೇಕು. ಈ ಘೋರ ಕಲಿಯುಗದಲ್ಲಿ ಪಾರಾಗಬೇಕಾದರೆ ಭಗವದ್ಭಕ್ತಿ, ರಾಮನಾಮ ಸ್ಮರಣದ ಹೊರತು ಎರಡನೇ ಉಪಾಯವಾವುದೂ ಇಲ್ಲ. ಆಯುಷ್ಯದ್ದು ಭರವಸೆ ಇಲ್ಲ. ಆದಷ್ಟು ತೀವ್ರವಾಗಿ ಕೃತಾರ್ಥವಾಗಲಿಕ್ಕೆ ಪ್ರಯತ್ನ ಮಾಡಬೇಕು. ಪಾರಮಾರ್ಥಕ್ಕೆ ಮೊದಲ ಸಾಧನಾ ಸತ್ಸಂಗತಿ. ಸಾಧು ಸಂಗತಿಯಿಂದ ಎಷ್ಟೋ ಜನರು ಪಾರಾಗಿ ಹೋದರು. ಸಾಧು ಸಂಗತಿಯಿಂದ ಕ್ಷಮಾ, ಭೂತದಯಾ, ಶಾಂತಿ, ವೈರಾಗ್ಯ, ಸಮಾಧಾನ, ವಿವೇಕ, ಪ್ರವ್ರುತ್ತಿ ಮಾರ್ಗದ ಗಮನ ಇತ್ಯಾದಿ ಅನೇಕ ಸನ್ಮಾರ್ಗಗಳು ಪ್ರಯತ್ನ ಮಾಡದಲೇ ದೊರೆಯುತ್ತವೆ. ಕಾಮ ಕ್ರೋಧಾದಿ ಷಡ್ವೈರಿಗಳೂ, ಪಾರಮಾರ್ಥಕ್ಕೆ ವಿಘ್ಹ್ನ ಮಾಡತಕ್ಕಂಥ ದಂಭ ಅಹಂಕಾರಾದಿಗಳೂ ತಮ್ಮಷ್ಟಕ್ಕೆ ತಾವೇ ಲಯಹೊಂದುತ್ತವೆ. ಸಾಧು ಸಂಗತಿ ಮಹಿಮಾ ಅಗಾಧವದೆ. ಸಾಧುಗಳಲ್ಲಿ ಸದೋದಿತ ಭಗವಚ್ಚರ್ಚಾ, ಭಗವದ್ಗುಣಾನುವರ್ಣನ, ರಾಮನಾಮಸ್ಮರಣ, ಸದೋಪದೇಶ, ಅಹೋರಾತ್ರಿ ನಡೆದಿರುತ್ತದೆ. ಅಲ್ಲಿ ವಾಸಮಾಡಿದವರಿಗೆ ಇದನ್ನೆಲ್ಲ ಕೇಳಿ ಕೇಳಿ ಪರಮಾತ್ಮನಲ್ಲಿ ತದಾಕಾರವೃತ್ತಿ ಆಗುತ್ತದೆ. ಪರಮಾತ್ಮನಲ್ಲಿ ವೃತ್ತಿ ಲಯವಾದರೆ ಜೀವನ್ಮುಕ್ತನಾಗುತ್ತಾನೆ.ವಿಷಯಾಕಾರವೃತ್ತಿಯಿಂದ ಬಂಧಾ, ಪರಮಾತ್ಮಕಾರವೃತ್ತಿಯಿಂದ ಮೋಕ್ಷಾ. ವೃತ್ತಿಗೆ ವಿಷಯದ ಸಂಬಂಧವಾಗದೆ ಇರಲಿಕ್ಕೆ ಸದೋದಿತ ಭಗವದನುಸಂಧಾನವೇ ಕಾರಣ. ಕೂತಾಗ, ನಿಂತಾಗ, ಮಲಗಿದಾಗ, ಹೋಗೋವಾಗ, ಬರೋವಾಗ ಸದಾ ಸರ್ವದಾ ರಾಮಧ್ಯಾನ ಮಾಡುತ್ತಿರಬೇಕು. ರಾಮನಾಮ ಬಿಟ್ಟು ವಿಷಯದಕಡೆ ಹೋಗಲಿಕ್ಕೆ ವೃತ್ತಿಗೆ ಸವಡ ಕೊಡಬಾರದು. " ಹೇ ರಾಮಾ, ಹೇ ದಯಾನಿಧೇ! ನನ್ನ ಎಂದ ಉದ್ಧಾರ ಮಾಡುವಿ. ನಿನ್ನ ಸಗುಣಮೂರ್ತಿ ಎಂದ ಕಂಡೇನು; ರಾಮಾ ತೀವ್ರ ದರ್ಶನ ಕೊಡೋ! ನಿನ್ನ ದರ್ಶನ ಆಗದ ಹೊರತು ಚೈನ ಇಲ್ಲ. ರಾಮಾ ನಾನು ಅಗಧ ಪಾಪಿ ಇದ್ದೇನೆ. ನನ್ನಂಥ ಕೆಟ್ಟವರು ಜಗತ್ತಿನಲ್ಲಿ ಯಾರೂ ಇಲ್ಲ. ಹೇ ದಯಾಸಮುದ್ರ, ರಾಮಾ, ತೀವ್ರವಾಗಿ ಭವಸಮುದ್ರವನ್ನು ದಾಟಿಸು. ಸಂತತಿ ಸಂಪತ್ತಿ ಮೊದಲಾದ ಐಹಿಕ ಪಾರತ್ರಿಕ ಸುಖವು ಏನೂ ಬೇಡ. ನಿನ್ನ ಪಾದದಲ್ಲಿ ದೃಡ ಭಕ್ತಿ ಕೊಡು. ನನ್ನ ನಾಲಿಗೆಯಲ್ಲಿ ಸದಾ ರಾಮ (ನಿನ್ನ) ನಾಮವಿರಲಿ. ಕಿವಿಗಳು ರಾಮ (ನಿನ್ನ) ಕಥಾ ಕೇಳಲಿ. ಮಸ್ತಕವು ರಾಮ (ನಿನ್ನ) ಪಾದಕ್ಕೆ ಸಾಷ್ಟಾಂಗ ಹಾಕಲಿ. ಕೈಗಳಿಂದ ರಾಮ (ನಿನ್ನ) ಪೂಜಾ ಸ್ಸಮ್ಮಾರ್ಜನಾದಿ ಸೇವಾ ಘಡಾಯಿಸಲಿ. ರಾಮಾ, ನಾನು ಅಜ್ಞಾನಿ ಇದ್ದೇನಿ. ಏನೂ ತಿಳುವಳಿಕೆಯಿಲ್ಲ. ನೀನೇ ನನ್ನ ಹೃದಯದಲ್ಲಿ ನಿಂತು, ನಿನ್ನ ಪಾದದಲ್ಲಿ ಪ್ರೇಮ ಹುಟ್ಟುವಂತೆ ಮಾಡು. ಶ್ರೀ ರಾಮಾ, ನಿನ್ನ ಹೊರತು ನನಗೆದಾರೂ ಆಧಾರ ಇಲ್ಲ. ನೀನೇ ತಂದೆ ತಾಯಿ ಬಂಧು ಬಳಗಾ. ಹೇ ಕೃಪಾಸಾಗರಾ, ಶ್ರೀರಾಮಾ, ಅಜ್ನಾನಧ್ವಾಂತ ನಿವಾರಣಾ, ನೀನೇ ಗತಿ ಎಂದು ಅನನ್ಯಭಾವದಿಂದ ಶರಣ ಹೋಗಬೇಕು. ಸಹಸಾ ಪಾಪಮರ್ಗದ ಕಡಿ ಪ್ರವೃತ್ತಿ ಇರಬಾರದು. ಸುಳ್ಳು ಕೆಲಸಕ್ಕೆ ಹೋಗಬಾರದು. ಜನರು ನಿಂದಾ ಮಾಡಿದರೆ ವಿಷಾದಪಡಬಾರದು. ಸ್ತುತಿ ಮಾಡಿದರೆ ಹರ್ಷಪಡಬಾರದು. ಜನರ ನಿಂದಾ-ಸ್ತುತಿ ಮಾಡಬಾರದು. ಸರ್ವತ್ರದಲ್ಲಿ ಪರಮಾತ್ಮ ಇದ್ದಾನ. ಹೆಂಡರು ಮಕ್ಕಳು, ಮನಿ, ಹೊಲಾ, ಸಂಪತ್ತಿ ಮೊದಲಾದ ದೃಶ್ಯಪದಾರ್ಥ ಮಿಥ್ಯಾ ಎಂದು ತಿಳಿಯಬೇಕು. ದೇವರು ಒಬ್ಬನೇ ಶಾಶ್ವತಾ. ಅಹೋರಾತ್ರಿ ರಾಮಭಜನೆಯಲ್ಲೇ ಕಾಲಕ್ರಮಣ ಮಾಡಬೇಕು. ಜಯ ಜಯ ರಘುವೀರ ಸಮರ್ಥ.